ನೈಲಾಡಿ ಕದ್ರಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಭವ್ಯ ಬ್ರಹ್ಮಕಲಶೋತ್ಸವ : ಪೇಜಾವರ ಶ್ರೀಗಳ ಆಶೀರ್ವಚನ

February 25, 2026 11:33 AM

ಬ್ರಹ್ಮಾವರ, ಫೆ. 25: ಇಲ್ಲಿಗೆ ಸಮೀಪದ ಬಿಲ್ಲಾಡಿ ಗ್ರಾಮದ ನೈಲಾಡಿ ಕದ್ರಂಜೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಫೆ. 23ರಂದು ನಡೆದ ಬ್ರಹ್ಮಕಲಶೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಜರುಗಿತು. ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ದೇವಾಲಯದ ಅಭಿವೃದ್ಧಿ ಕಾರ್ಯದಲ್ಲಿ ಭಕ್ತರ ಒಗ್ಗಟ್ಟನ್ನು ಹೊಗಳಿದರು.

ಶ್ರೀಗಳು ಮಾತನಾಡಿ, “ರಥವನ್ನು ಸೇರಿ ಎಳೆದಾಗ ಹೇಗೆ ಸುಲಭವಾಗಿ ಸಾಗುತ್ತದೆ, ಹಾಗೆಯೇ ಭಕ್ತರ ಸಮೂಹ ಶ್ರಮದಿಂದ ಕದ್ರಂಜೆ ದೇವಾಲಯ ಇಂದು ಶಿಲಾಮಯ ರೂಪ ಪಡೆದು ಶತಮಾನಗಳ ಕಾಲ ಅಳಿಯದ ಮಟ್ಟಿಗೆ ಬೆಳಗಿದೆ. ಭಕ್ತರು ತಮ್ಮ ಸಂಪಾದಿತ ಧನವನ್ನೂ ‘ಕೃಷ್ಣಾರ್ಪಣಂ’ ಎಂದು ಸಮರ್ಪಿಸಿರುವುದು ಮಹಾತ್ವದ ವಿಚಾರ,” ಎಂದು ಹೇಳಿದರು.

ಕೋವಿಡ್ ಸಂದರ್ಭ ನೀಲಾವರ ಗೋಶಾಲೆಗೆ ನಿರಂತರವಾಗಿ ಹುಲ್ಲು ಒದಗಿಸಿದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿಯ ಸೇವೆಯನ್ನು ಶ್ರೀಗಳು ವಿಶೇಷವಾಗಿ ಮೆಚ್ಚಿದರು. “ಗೋಸೇವೆಯ ಪುಣ್ಯದಿಂದಲೇ ಅವರಿಗೆ ದೇವರ ಕೆಲಸದ ಮುಂದಾಳತ್ವ ಲಭಿಸಿದೆ,” ಎಂದು ಪ್ರಶಂಸಿಸಿದರು.

“ನಾವು ಮಾಡಿದ್ದಲ್ಲ, ದೇವರು ಮಾಡಿಸಿಕೊಂಡಿದ್ದಾನೆ” – ಮಂಜರು ಕೃಷ್ಣಮೂರ್ತಿ

ಹೈದರಾಬಾದ್‌ನ ಉದ್ಯಮಿ ಮರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ, “ದೇವಾಲಯದ ಕೆಲಸವನ್ನು ನಾನು ಮಾಡಿದ್ದೇನೆ ಎಂದು ಹೇಳುವುದಕ್ಕಿಂತ, ಭಗವಂತವೇ ಹತ್ತು ಮನಸ್ಸುಗಳನ್ನು ಒಂದಾಗಿ ಸೇರಿಸಿ ಈ ಕಾರ್ಯ ಮಾಡಿಸಿಕೊಂಡಿದ್ದಾನೆ ಎನ್ನುವುದು ಮುಖ್ಯ,” ಎಂದು ಹೇಳಿದರು. ಕಾಲ ಬಂದಾಗ ದೇವರು ಸೌಭಾಗ್ಯ ಮತ್ತು ಸುಭಿಕ್ಷೆ ನೀಡುತ್ತಾನೆ ಎಂದು ಅವರು ಆಶಿಸಿದರು.

ಪ್ರಾಮಾಣಿಕ ಶ್ರಮಕ್ಕೆ ಮೆಚ್ಚುಗೆ

ಕೃಷ್ಣಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಸಂಪತ್ ಶೆಟ್ಟಿ ಮಾತನಾಡಿ, “ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿಯವರು ದೇವಾಲಯದ ಅಭಿವೃದ್ಧಿಗಾಗಿ ಅಪ್ರತಿಹತ ಪ್ರಯತ್ನ ನಡೆಸಿದ್ದಾರೆ. ಅವರ ದೃಢಸಂಕಲ್ಪದಿಂದಲೇ ಶಿಲಾಮಯ ದೇವಾಲಯ ನಿರ್ಮಾಣ ಸಾಧ್ಯವಾಯಿತು,” ಎಂದು ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಟ್ಟಡ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಬಿಲ್ಲಾಡಿ, ಕೋಟ ಶ್ರೀ ಅಮೃತೇಶ್ವರಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್, ಮಂದಾರ್ತಿ ದುರ್ಗಾಪರಮೇಶ್ವರಿ ದೇಗುಲದ ಮೊಕ್ತೇಸರ ಧನಂಜಯ ಶೆಟ್ಟಿ, ಉದ್ಯಮಿ ರಾಘವೇಂದ್ರ ರಾವ್, ಜೀರ್ಣೋದ್ಧಾರ ಸಮಿತಿಯ ಉಮೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಗಣೇಶ್ ಪ್ರಸಾದ್ ಕಾಂಚನ್, ಸಜೀತ್ ಹೆಗ್ಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿಯವರು ವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಪೇಜಾವರ ಶ್ರೀಗಳಾದವರು ಸನ್ಮಾನಿಸಿದರು. ದೇವಾಲಯಕ್ಕೆ ಸೇವೆ ಸಲ್ಲಿಸಿದ ದಾನಿಗಳನ್ನು ಕೂಡ ಗೌರವಿಸಲಾಯಿತು.

ಕಾರ್ಯಕ್ರಮವನ್ನು ದಾಮೋದರ್ ಶರ್ಮ ನಿರೂಪಿಸಿದರು.


Harish Kiran Thunga

Harish Kiran Thunga is a journalist and editor based in Karnataka, India. He is actively involved in Udupi District Working Journalist Associations in the Udupi district. He serves as the Editor in Chief at Newsrays.in, a regional news portal. He also manages the Newsrays live YouTube channel, which features local news and short stories.

Join WhatsApp

Join Now

Leave a Comment

You cannot copy content of this page