ಸಾಲಿಗ್ರಾಮ: ಪಾಕಿಸ್ತಾನದ ಗಡಿಯಲ್ಲಿದ್ದರೂ ಬೆಳಗ್ಗೆ ಸ್ನಾನ ಮಾಡಿ ಹತ್ತು ಗಾಯತ್ರಿ ಮಂತ್ರ ಹೇಳಿದರೇ ಮಾತ್ರ ಪರಮ ಸುಖ. ಆ ದಿನದ ಕಾರ್ಯಗಳಲ್ಲಿ ನೆಮ್ಮದಿ ಇರುತ್ತದೆ ಎಂದು ನಿವೃತ ಸೈನಿಕ, ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ ನಾವಡ ಹೇಳಿದರು.

ಅವರು ದೇವಸ್ಥಾನದ ಜ್ಞಾನ ಮಂದಿರದಲ್ಲಿ ನಡೆದ ವಸಂತ ವೇದ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ ಮನೆಯಲ್ಲಿ ಬಾಲ್ಯದಿಂದ ನೀಡಿದ ಸಂಸ್ಕಾರವನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ಲೌಕಿಕ ವಿದ್ಯೆಯೊಂದಿಗೆ ವೇದಾಧ್ಯಯನ ಕೂಡ ಮಕ್ಕಳು ಕಲಿಯಬೇಕು ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ್ ವೇದಾಧ್ಯಯನ ಎನ್ನುವುದು ಸಂಪ್ರದಾಯ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು. ವಿಜ್ಞಾನ ತಂತ್ರಜ್ಞಾನಗಳಿಗೂ ವೇದ ಎನ್ನುವುದು ಅಡಿಪಾಯವಾಗಿದೆ. ನಿತ್ಯ ಅನುಷ್ಠಾನವು ಶಿಸ್ತು ಮತ್ತು ಜ್ಞಾನ ವೃದ್ಧಿಸುತ್ತದೆ. ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ನೀವು ಕಲಿಯುವ ವಿಷಯಗಳನ್ನು ಸರಿಯಾದ ಕ್ರಮದಲ್ಲಿ ಅಧ್ಯಯನ ಮಾಡಿ ಎಂದು ಕರೆನೀಡಿದರು.

ಕಾರ್ಯದರ್ಶಿ ಪರಶುರಾಮ ಭಟ್ ವಿದ್ಯಾರ್ಥಿಗಳಿಗೆ ಶಿಬಿರದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಚಂದ್ರಶೇಖರ ಉಪಾದ್ಯ, ಸದಸ್ಯರಾದ ತಾರಾನಾಥ ಹೊಳ್ಳ, ಜಗದೀಶ್ ಕಾರಂತ, ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಶ್ರೀಪತಿ ಅಧಿಕಾರಿ ಸೇರಿದಂತೆ ಹಲವರು ಇದ್ದರು.

ಅಖಿಲೇಶ್ ಕಾರ್ಯಕ್ರಮ ನಿರೂಪಿಸಿದರು, ನಾಗರಾಜ್ ಹಂದೆ ಸ್ವಾಗತಿಸಿದರು,,
ಕೂಟಮಹಾಜಗತ್ತಿನ ಸಾಲಿಗ್ರಾಮ ಅಂಗಸಂಸ್ಥೆ ಅಧ್ಯಕ್ಷ ಪಿ.ಸಿ ಹೊಳ್ಳ ವಂದಿಸಿದರು.








