ಸಾಸ್ತಾನ, ಫೆಬ್ರವರಿ 07:
ಕಳೆದ ಎರಡು ದಿನಗಳಿಂದ ನೀರು ಬಿಡದೆ ಇರುವ ಹಿನ್ನೆಲೆ ಐರೋಡಿ ಎರಡನೇ ವಾರ್ಡ್ನ ಹೊಳೆಬದಿ ಗ್ರಾಮಸ್ಥರು ಪಂಚಾಯತಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಂಚಾಯತ್ನ ಪಂಪ್ ಆಪರೇಟರ್ ಕೃಷ್ಣ ಎಂಬುವವರು ಮದ್ಯಪಾನ ಮಾಡಿ, ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದೆ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಪಂಚಾಯತ್ ಸದಸ್ಯ ಶಿವರಾಮ್ ಶ್ರೀಯಾನ್ ಮತ್ತು ನಟರಾಜ್ ಗಾಣಿಗ, ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿದೆ ಆದರೂ ಸುಧಾರಿಸಿಲ್ಲ. ಈ ಹಿನ್ನೆಲೆ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಅವರನ್ನು ತೆಗೆದು ಹಾಕಿ ಬೇರೆ ಪಂಪ್ ಆಪರೇಟರ್ ನೇಮಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಪಿಡಿಓ ಅವರು ಅವರನ್ನು ತೆಗೆಯದೇ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ನಾವು ಸಿಇಓ ಅವರಿಗೆ ದೂರು ನೀಡುತ್ತೇವೆ ಎಂದರು.

ಈ ಸಂದರ್ಭ ಮಾತನಾಡಿದ ಸಂತ್ರಸ್ಥ ಮಹಿಳೆ, ನಮ್ಮಲ್ಲಿ ಕುಡಿಯುವುದಕ್ಕೂ ನೀರಿಲ್ಲ. ಬಾವಿ ಇದ್ದರೆ ನಾವು ಪಂಚಾಯತ್ ನೀರಿಗೆ ಅವಲಂಭಿತರಾಗಬೇಕಾಗಿಲ್ಲ. ನಮ್ಮಲ್ಲಿ ಉಪ್ಪು ನೀರು ಬರುವುದರಿಂದ ಕುಡಿಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಪಂಚಾಯತ್ ನೀರನ್ನೇ ಅವಲಂಬಿಸಬೇಕಾಗಿದೆ. ಮಕ್ಕಳಿಗೆ ಕುಡಿಯುವುದಕ್ಕೆ ಒಂದು ತೊಟ್ಟು ನೀರಿಲ್ಲ. ಪ್ರತಿ ತಿಂಗಳೂ ಸರಿಯಾದ ಸಮಯಕ್ಕೆ ಬಂದು ಪಂಚಾಯತ್ನಿಂದ ಬಿಲ್ಲು ಸಂಗ್ರಹಿಸಲಾಗುತ್ತದೆ ಆದರೆ ನೀರು ಕೇಳಿದರೆ ಅಧಿಕಪ್ರಸಂಗ ಮಾತನಾಡುತ್ತಾರೆ. ನಿನ್ನೆ ನೀರು ಬರುವುದಿಲ್ಲವೇ ಎಂದು ಕೇಳಿದಾಗ ನೀರು ಬಿಡಲಾಗುವುದಿಲ್ಲ ಎಂಬ ಉಢಾಫೆಯ ಉತ್ತರ ನೀಡುತ್ತಾರೆ ಪಂಪ್ ಆಪರೇಟರ್ ಕೃಷ್ಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ಕಾರ್ಯದರ್ಶಿ ವಿಜಯಕುಮಾರಿ ಮಾತನಾಡಿ, ಅವರು ಕುಡಿದು ಕೆಲಸಕ್ಕೆ ಬರುತ್ತಿರುವುದರಿಂದ ಈ ಸಮಸ್ಯೆಗಳು ಆಗುತ್ತಿದೆ. ಈ ಬಗ್ಗೆ ಅವರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಇತ್ತಿಚೆಗೆ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಅವರ ಕುಟುಂಬಸ್ಥರು ಅವರ ಜವಬ್ದಾರಿಯನ್ನು ನಾನು ತೆಗೆದುಕೊಳ್ಳುವುದಾಗಿ ಹೇಳಿದ ಮೇಲೆ ಸುಮ್ಮನ್ನಿದ್ದೇವು. ಈಗ ಪುನಃ 15 ದಿನ ಕೆಲಸಕ್ಕೆ ಬಂದು ಇನ್ನು ಹದಿನೈದು ಗೈರು ಹಾಜಾರುವುದು ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಾತ್ಕಾಲಿಕವಾಗಿ ಬೇರೆ ಪಂಪ್ ಆಪರೇಟರ್ ಅವರನ್ನು ನೇಮಿಸಿಕೊಂಡು ಜನರಿಗೆ ಸಸೂತ್ರವಾಗಿ ನೀರು ಸರಭರಾಜು ಆಗುವಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಇಂದು ಮಧ್ಯಾಹ್ನದ ಒಳಗೆ ನೀರು ಸರಭರಾಜು ಮಾಡಲಾಗುವುದು ಎಂದು ತಿಳಿಸಿದ ಬಳಿಕ ಸಾರ್ವಜನಿಕರು ವಾಪಾಸು ತೆರಳಿದರು.
ಸಮಸ್ಯೆಗೆ ಕಾರಣ ಏನು?
ಪ್ರಸ್ತುತ ಈ ಸಮಸ್ಯೆಗೆ ಮುಖ್ಯ ಕಾರಣ ಪಂಪ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣ ಎಂಬುವವರು. ಪಂಪ್ ಆಪರೇಟರ್ ಆಗಿ ನೇಮಕಗೊಳಿಸಿದರೂ ಸರಿಯಾಗಿ ಕೆಲಸ ಮಾಡದ ಹಿನ್ನೆಲೆ ಅವರನ್ನು ಅಟೆಂಡರ್ ಆಗಿ ನೇಮಿಸಿಕೊಳ್ಳಲಾಗಿತ್ತು. ಇತ್ತಿಚಿಗೆ ಐರೋಡಿ ಗ್ರಾಮಪಂಚಾಯತ್ನ ಹಲವು ಹುದ್ದೆಗಳಲ್ಲಿ ಬದಲಾವಣೆ ಆದ ಕಾರಣ ಪಂಪ್ ಆಪರೇಟರ್ ಹುದ್ದೆ ಖಾಲಿಯಾಗಿತ್ತು. ಈ ಹಿನ್ನೆಲೆ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣ ಅವರನ್ನು ಪುನಃ ಪಂಪ್ ಆಪರೇಟರ್ ಆಗಿ ಪಿಡಿಓ ನೇಮಕ ಮಾಡಿದ್ದರು. ಮನಸ್ಸಿಗೆ ಬಂದ ಹಾಗೆ ರಜೆ ಹಾಕಿದ ಪರಿಣಾಮ ನೀರಿನ ಅಗತ್ಯವಿರುವಲ್ಲಿ ನೀರನ್ನು ಬಿಟ್ಟಿಲ್ಲ. ಈ ಕಾರಣಕ್ಕಾಗಿ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿ ಪಂಚಾಯತ್ಗೆ ಮುತ್ತಿಗೆ ಹಾಕಿದ್ದಾರೆ.











