ಅಭಿಮತ ಸಂಭ್ರಮ 2026 ಪೋಸ್ಟರ್ ಬಿಡುಗಡೆ
ಬ್ರಹ್ಮಾವರ: ನಮ್ಮ ಊರಿನ ಕಲೆ ಹಾಗೂ ಸಂಸ್ಕೃತಿ ಬೆಳೆಸುವ ಕಾರ್ಯಕ್ರಮಗಳನ್ನು ಟೀಮ್ ಅಭಿಮತ ತಂಡ ಮಾಡುತ್ತಿರುವುದು ಅತ್ಯಂತ ಸ್ತುತ್ಯಾರ್ಹ ಎಂದು ಮಿಸ್ ಗ್ಲೋಬಲ್ ಇಂಡಿಯಾ ಪ್ರಶಸ್ತಿ ಪುರಸ್ಕೃತ, ಸ್ವೀಝಲ್ ಫುಟ್ರಾಡೋ ಹೇಳಿದರು.
ಇಲ್ಲಿನ ರೋಟರಿ ಕ್ಲಬ್ನ ಸಮಾಜ ಮಂದಿರದಲ್ಲಿ ಶನಿವಾರ ಜನಸೇವಾ ಟ್ರಸ್ಟ್ (ರಿ) ಮೂಡುಗಿಳಿಯಾರು ಹಾಗೂ ಟೀಮ್ ಅಭಿಮತ ಆಶ್ರಯದಲ್ಲಿ ಫೆ.14 ರಂದು ನಡೆಯಲಿರುವ ಅಭಿಮತ ಸಂಭ್ರಮದ ಪೋಸ್ಟರ್ ಅನಾವರಣ ಮಾಡಿ ಅವರು ಮಾತನಾಡಿದರು.
ಜಿ.ಎಂ.ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಪ್ರಕಾಶ್ಚಂದ್ರ ಶೆಟ್ಟಿ ಅವರು, ಪ್ರತಿಫಲ ಅಪೇಕ್ಷಿಸದೆ ಮಾಡುವ ಸಮಾಜಮುಖಿ ಕಾರ್ಯಕ್ರಮಗಳಿಗೆ ಯಾವತ್ತೂ ಸಮಾಜದ ಮೆಚ್ಚುಗೆ ಇದೆ. ಕಾರ್ಯಕ್ರಮಗಳ ತಯಾರಿಯ ಕುರಿತು ಪೂರ್ವ ಮಾಹಿತಿ ನೀಡುವ ಪೋಸ್ಟರ್ ಬಿಡುಗಡೆ ಕೇವಲ ಸಂದೇಶ ನೀಡುವ ಕಾರ್ಯಕ್ರಮವಲ್ಲ, ಪೂರ್ತಿ ತಂಡದ ಪ್ರಯತ್ನಗಳ ಅನಾವರಣಗಳಾಗುತ್ತದೆ. ಸದುದ್ದೇಶದ ಕಾರ್ಯವನ್ನು ಮಾಡುತ್ತಿರುವ ಟೀಮ್ ಅಭಿಮತ ತಂಡ ಅಭಿನಂದನೆಗೆ ಅರ್ಹರು ಎಂದರು.
ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಸತೀಶ್ ಶೆಟ್ಟಿ ಅವರು, ಸಾಂಸ್ಕೃತಿಕ, ಆರೋಗ್ಯ ಸೇರಿದಂತೆ ಸಮಾಜಕ್ಕೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ರೂಢಿಸಿಕೊಂಡಿರುವ ಟೀಮ್ ಅಭಿಮತ ತಂಡ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಲಿ ಎಂದರು.
ಮೂಡುಗಿಳಿಯಾರು ಜನಸೇವಾ ಟ್ರಸ್ಟ್ (ರಿ) ಅಧ್ಯಕ್ಷರಾದ ವಸಂತ ಗಿಳಿಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತ ಪ್ರಣೂತ್ ಗಾಣಿಗ ನಿರೂಪಿಸಿದರು. ಸಾಂಸ್ಕೃತಿಕ ಚಿಂತಕ ಉದಯ್ ಕುಮಾರ್ ಶೆಟ್ಟಿ ಪಡುಕೆರೆ, ಸ್ವಾಗತ ಸಮಿತಿ ಅಧ್ಯಕ್ಷ ರಾಜೇಶ್ ಕೆ.ಸಿ, ಟೀಮ್ ಅಭಿಮತ ಸಂಚಾಲಕ ಪ್ರವೀಣ್ ಯಕ್ಷಿಮಠ ಇದ್ದರು.











