ಕುಂದಾಪುರ: ಇಲ್ಲಿನ ವಿಠಲವಾಡಿಯ ಮೈನಾಡಿ ರಸ್ತೆಯ ನಿವಾಸಿ, ಖ್ಯಾತ ಇಂಜಿನಿಯರ್ ಮತ್ತು ಪುರಸಭೆ ಕಾಮಗಾರಿ ಗುತ್ತಿಗೆದಾರರಾದ ರವಿಶಂಕರ್ (62) ಅವರು ಶನಿವಾರ ಅಲ್ಪಕಾಲದ ಅಸ್ವಸ್ಥತೆಯಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.
ರವಿಶಂಕರ್ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಪುರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುತ್ತಿಗೆದಾರರಾಗಿ ಸಕ್ರಿಯರಾಗಿದ್ದರು. ಕೇವಲ ವೃತ್ತಿಪರರಾಗಿ ಮಾತ್ರವಲ್ಲದೆ, ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿಯೂ ಅವರು ಗುರುತಿಸಿಕೊಂಡಿದ್ದರು. ವಿಶೇಷವಾಗಿ ಮೈನಾಡಿ ಪರಿಸರದ ಅನೇಕ ಬಡ ಕುಟುಂಬಗಳಿಗೆ ಮನೆ ಕಟ್ಟುವ ಸಂದರ್ಭದಲ್ಲಿ ಉಚಿತವಾಗಿ ತಾಂತ್ರಿಕ ಪರಿಣತಿ ಹಾಗೂ ಸಲಹೆಗಳನ್ನು ನೀಡುತ್ತಿದ್ದರು. ಅಲ್ಲದೆ, ಪುರಸಭೆಯಿಂದ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಅನುಮೋದನೆಗಳನ್ನು ಕೊಡಿಸುವಲ್ಲಿ ಬಡವರಿಗೆ ಆಸರೆಯಾಗಿದ್ದರು.
ಮೃತರು ಪತ್ನಿ, ಪುರಸಭೆಯ ಮಾಜಿ ಅಧ್ಯಕ್ಷೆ ಯು. ಕಲಾವತಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸ್ಥಳೀಯ ಗಣ್ಯರು ಮತ್ತು ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಕುಂದಾಪುರದ ಹಿರಿಯ ಇಂಜಿನಿಯರ್ ರವಿಶಂಕರ್ ನಿಧನ








