ಬಾರ್ಕೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಸ್ಥಳೀಯವಾಗಿಯೇ ನೀಡುವ ಉದ್ದೇಶದಿಂದ, ಬಾರ್ಕೂರು ಎಜುಕೇಶನಲ್ ಸೊಸೈಟಿ ಹಾಗೂ ಕುಂದಾಪುರದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಸಹಯೋಗದಲ್ಲಿ ಆರಂಭವಾಗಿರುವ ‘ಬಾರ್ಕೂರು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು’ ವತಿಯಿಂದ ಏಪ್ರಿಲ್ 5ರಂದು ಬೃಹತ್ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಎಂದು ಸುಜ್ಞಾನ್ ಎಜ್ಯುಕೇಶನಲ್ ಟ್ರಸ್ಟ್ನ ಅಧ್ಯಕ್ಷ ರಮೇಶ್ ಶೆಟ್ಟಿ ಹೇಳಿದರು.
ಅವರು ಬಾರ್ಕೂರಿನ ಕಾಲೇಜಿನ ಕ್ಯಾಂಪಸ್ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, “ಆರ್ಥಿಕ ಅಡಚಣೆಯಿಂದ ಯಾವುದೇ ಪ್ರತಿಭಾವಂತ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾಗಬಾರದು. ಈ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವವರಿಗೆ ಕಾಲೇಜು ಶುಲ್ಕದಲ್ಲಿ ಶೇ. 75ರವರೆಗೆ ರಿಯಾಯಿತಿ ನೀಡಲಾಗುವುದು. ಅಲ್ಲದೆ, ಆರ್ಥಿಕವಾಗಿ ಹಿಂದುಳಿದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ಟ್ರಸ್ಟ್ ಬದ್ಧವಾಗಿದೆ” ಎಂದರು.
ನಗರ ಮಟ್ಟದ ತರಬೇತಿ ಇನ್ಮುಂದೆ ಬಾರ್ಕೂರಿನಲ್ಲಿಯೇ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಬಿ. ಶಾಂತಾರಾಮ ಶೆಟ್ಟಿ ಅವರು, 1946ರಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬಾರ್ಕೂರು ಎಜುಕೇಶನಲ್ ಸೊಸೈಟಿ, ಈಗಿನ ಸ್ಪರ್ಧಾತ್ಮಕ ಯುಗದ ಅಗತ್ಯಕ್ಕೆ ತಕ್ಕಂತೆ ಸುಜ್ಞಾನ ಟ್ರಸ್ಟ್ ಜೊತೆ ಕೈಜೋಡಿಸಿದೆ. ಇದರಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ತೆರಳುವ ಅಗತ್ಯವಿಲ್ಲದೇ, ಸ್ಥಳೀಯವಾಗಿಯೇ ಉನ್ನತ ತರಬೇತಿ ಪಡೆಯಬಹುದು ಎಂದು ತಿಳಿಸಿದರು.
ತಜ್ಞರಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ:
ಸುಜ್ಞಾನ ಎಜುಕೇಶನಲ್ ಟ್ರಸ್ಟ್ (ರಿ.) ಇದರ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಇಲ್ಲಿಯವರೆಗೆ CET, NEET, JEE ಮತ್ತು CA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ವಿದ್ಯಾರ್ಥಿಗಳು ನಗರಗಳಿಗೆ ತೆರಳಬೇಕಾಗಿತ್ತು. ಆದರೆ ಇದೀಗ ಅದೇ ಮಟ್ಟದ ತರಬೇತಿಯನ್ನು ಬಾರ್ಕೂರಿನಲ್ಲಿಯೇ ನೀಡಲಾಗುವುದು. ಗ್ರಾಮೀಣ ವಿದ್ಯಾರ್ಥಿಗಳಿಗೆ ಇದು ದೊಡ್ಡ ಅನುಕೂಲವಾಗಿದೆ. ಈ ಯೋಜನೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ, ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ ಪಡೆದಿರುವ ಡಾ. ರಮೇಶ್ ಶೆಟ್ಟಿ ಅವರ ಮಾರ್ಗದರ್ಶನವಿದೆ. ಎ.5ರಂದು ಸುಜ್ಞಾನ ವಿದ್ಯಾರ್ಥಿವೇತನ ಪರೀಕ್ಷೆ ಏರ್ಪಡಿಸಿದ್ದು ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು, ಹಾಗು CBSE/ICSE ಪಠ್ಯಕ್ರಮದ ವಿದ್ಯಾರ್ಥಿಗಳು ಕೂಡ ಈ ಪರೀಕ್ಷೆಗೆ ಹಾಜರಾಗಬಹುದು. ಪರೀಕ್ಷೆಗೆ ಬರುವಾಗ ಆಧಾರ್ ಕಾರ್ಡ್, ಪೆನ್, ಪೆನ್ಸಿಲ್ ಮತ್ತು ಎಕ್ಸಾಮ್ ಪ್ಯಾಡ್ ತರಬೇಕು. ಪ್ರಶ್ನಾಪತ್ರಿಕೆ SSLC ಪಠ್ಯಕ್ರಮ ಆಧಾರಿತವಾಗಿರುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಬಾರ್ಕೂರು ಎಜುಕೇಶನಲ್ ಸೊಸೈಟಿ ಹಾಗೂ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅನ್ನು ಸಂಪರ್ಕಿಸಬಹುದು ಎಂದು ಭರತ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಾರ್ಕೂರು ಎಜುಕೇಶನಲ್ ಸೊಸೈಟಿ(ರಿ.)ಯ ಉಪಾಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ, ಎಸ್.ವಿ.ವಿ.ಎನ್ ಆಂಗ್ಲ ಮಾದ್ಯಮ ಶಾಲೆಯ ಸಂಚಾಲಕ ರಾಜಾರಾಮ ಶೆಟ್ಟಿ ಆಶ್ರಯ ಬ್ರಹ್ಮಾವರ, ಆಡಳಿತ ಮಂಡಳಿಯ ಸದಸ್ಯರಾದ ಎಸ್. ಜಯರಾಮ ಶೆಟ್ಟಿ, ನ್ಯಾಶನಲ್ ಐಟಿಐ ಸಂಚಾಲಕ ಬಿ.ರಾಮಚಂದ್ರ ಕಾಮತ್, ನೇಷನಲ್ ಪದವಿಪೂರ್ವ ಕಾಲೇಜಿನ ಸಂಚಾಲಕ ರಾಜ್ ಗೊಫಾಲ ನಂಬಿಯಾರ್ ಉಪಸ್ಥಿತರಿದ್ದರು. ಬಾರ್ಕೂರು ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಅಶೋಕ್ಕುಮಾರ್ ಶೆಟ್ಟಿ ಮಟಪಾಡಿ ಸ್ವಾಗತಿಸಿ ವಂದಿಸಿದರು.








