ಉಡುಪಿ, ಮಾರ್ಚ್ 02: ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಉಂಟಾಗಿರುವ ಅಸ್ಥಿರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಕಂಡುಬಂದಿರುವುದರಿಂದ, ಜಿಲ್ಲೆಯ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಹಮ್ಮಿಕೊಂಡಿದೆ.
ವಿಮಾನಯಾನ ನಿರ್ಬಂಧದ ಕಾರಣ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ ಸೇರಿದಂತೆ ಒಟ್ಟು 11 ದೇಶಗಳ ವಾಯುಪ್ರದೇಶಗಳನ್ನು ಮಾರ್ಚ್ 2 ರವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರ ಪರಿಣಾಮವಾಗಿ ಕರ್ನಾಟಕದ ಅನೇಕ ಪ್ರಯಾಣಿಕರು, ಮುಖ್ಯವಾಗಿ ಯುಎಇ (ದುಬೈ) ಸೇರಿದಂತೆ ಹಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದಾರೆ.
ಜಿಲ್ಲಾಡಳಿತದಿಂದ ಜಾರಿಗೊಂಡಿರುವ ಕ್ರಮಗಳು
- ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ನಿರ್ದೇಶನದಂತೆ ರಾಜ್ಯ ಮತ್ತು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳು 24×7 ಕಾರ್ಯನಿರ್ವಹಿಸುತ್ತಿವೆ.
- ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ರಾಯಭಾರಿ ಕಚೇರಿಗಳಿಂದ ಹೊರಬರುತ್ತಿರುವ ಸೂಚನಗಳನ್ನು ಜಿಲ್ಲಾಡಳಿತ ನಿರಂತರವಾಗಿ ಗಮನಿಸುತ್ತಿದೆ.
- ಉಡುಪಿ ಜಿಲ್ಲೆಯ ನಿವಾಸಿಗಳು ಅಥವಾ ಅವರ ಸಂಬಂಧಿಕರಿಗೆ ಅಗತ್ಯ ಮಾಹಿತಿ ಮತ್ತು ಸಹಾಯ ಒದಗಿಸಲು ತುರ್ತು ಸಹಾಯವಾಣಿಗಳನ್ನು ಸಕ್ರಿಯಗೊಳಿಸಲಾಗಿದೆ.
ಉಡುಪಿ ಜಿಲ್ಲೆಯ ತುರ್ತು ಸಹಾಯವಾಣಿ ಸಂಖ್ಯೆಗಳು
- ಉಡುಪಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ
📞 0820–2574802
☎️ ಟೋಲ್ ಫ್ರೀ: 1077 - ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ
📞 080–22340676
📞 080–22253707
☎️ ಟೋಲ್ ಫ್ರೀ: 1070
ಮಧ್ಯಪ್ರಾಚ್ಯದಲ್ಲಿರುವ ಕರ್ನಾಟಕದ ಜನರಿಗೆ ಸೂಚನೆಗಳು
- ಸ್ಥಳೀಯ ಸರ್ಕಾರಗಳು ನೀಡುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಸಂಕಷ್ಟದಲ್ಲಿರುವವರು ಸಂಬಂಧಿಸಿದ ದೇಶದ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು.
- “ಸಾರಥಿ ಸಹಾಯತಾ ಪೋರ್ಟಲ್”ನಲ್ಲಿ ನೋಂದಣಿ ಮಾಡುವ ಮೂಲಕ ತಮ್ಮ ವಿವರಗಳನ್ನು ದಾಖಲಿಸಬಹುದು.
- ವೀಸಾ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಹತ್ತಿರದ ಎಫ್.ಆರ್.ಆರ್.ಒ ಕಚೇರಿಯನ್ನು ಸಂಪರ್ಕಿಸಬಹುದು.
ಜಿಲ್ಲಾಡಳಿತವು ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲದೆ, ಅಧಿಕೃತ ಮಾರ್ಗಗಳ ಮೂಲಕ ಮಾಹಿತಿ ಪಡೆದು ಸುರಕ್ಷಿತ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ.







