ನವದೆಹಲಿ: ಯುದ್ಧ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಸುರಕ್ಷತೆ ಕುರಿತು ಗಲ್ಫ್ ರಾಷ್ಟ್ರಗಳ ಕನ್ನಡಿಗರು ವ್ಯಕ್ತಪಡಿಸಿರುವ ಆತಂಕದ ಹಿನ್ನೆಲೆಯಲ್ಲಿ, ಬೆಹರೈನ್, ಕತಾರ್, ದುಬೈ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ವಾಸಿಸುವ ಕನ್ನಡಿಗರ ಮನವಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಸಲುವಾಗಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಾರ್ಲಿಮೆಂಟಿನಲ್ಲಿ ಕೇಂದ್ರ ವಿದೇಶಾಂಗ ಮಂತ್ರಿ ಡಾ. ಎಸ್. ಜೈ ಶಂಕರ್ ಅವರನ್ನು ಸಂಸದ ಡಾ. ಮಂಜುನಾಥ ಅವರೊಂದಿಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ, ವಿಮಾನ ನಿಲ್ದಾಣಗಳ ಮೇಲೆ ನಡೆಯುತ್ತಿರುವ ದಾಳಿಗಳು ಹಾಗೂ ಅದರ ಪರಿಣಾಮವಾಗಿ ಅಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಗೆ ಉಂಟಾಗಿರುವ ಅಪಾಯಗಳನ್ನು ಚರ್ಚಿಸಲಾಯಿತು.
ಈ ಸಂದರ್ಭ ವಿದೇಶಾಂಗ ಮಂತ್ರಿ ಡಾ. ಜೈ ಶಂಕರ ಮಾತನಾಡಿ,
“ಯುದ್ಧಪೀಡಿತ ಪ್ರದೇಶಗಳಲ್ಲಿ ಇರುವ ಪ್ರತಿಯೊಬ್ಬ ಭಾರತೀಯನ ಸುರಕ್ಷತೆಯನ್ನು ಖಚಿತಪಡಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ. ವಿಮಾನ ನಿಲ್ದಾಣಗಳ ಮೇಲೆ ದಾಳಿಗಳು ಹೆಚ್ಚಾದರೂ, ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ. ಆತಂಕಪಡಬೇಕಾದ ಅವಶ್ಯಕತೆ ಇಲ್ಲ. ಯಾವುದೇ ಹಂತದಲ್ಲೂ ಭಾರತೀಯರನ್ನು ರಕ್ಷಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ,” ಎಂದು ಭರವಸೆ ನೀಡಿದರು.
ಸಂಸದ ಪೂಜಾರಿ ಅವರು ಸಹ ವಿದೇಶಾಂಗ ಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿ,
“ಗಲ್ಫ್ ದೇಶಗಳಲ್ಲಿರುವ ಅನೇಕ ಕನ್ನಡಿಗರು ಮತ್ತು ಭಾರತೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅವರ ಚಿಂತೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರುವುದು ಹರ್ಷಕರ,” ಎಂದು ಹೇಳಿದರು.











