ಮಂಜೇಶ್ವರ: ಆಸ್ತಿ ವಿಚಾರಕ್ಕೆ ನಡೆದ ಕೌಟುಂಬಿಕ ಕಲಹಕ್ಕೆ ತಂದೆಯೇ ಮಗಳ ಪ್ರಾಣವೇ ಬಲಿ ಪಡೆದ ದಾರುಣ ಘಟನೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಹಿಲ್ಟಾಪ್ ನಗರದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಘಟನೆಯ ವಿವರ:
ಕುಂಜತ್ತೂರು ನಿವಾಸಿ ಮರಿಯಮತ್ ಜುಮೈರಾ (18) ಎಂಬಾಕೆಯೇ ತನ್ನ ತಂದೆಯಿಂದಲೇ ಕೊಲೆಯಾದ ದುರ್ದೈವಿ. ವಿದೇಶದಿಂದ ಮೂರು ತಿಂಗಳ ಹಿಂದಷ್ಟೇ ಊರಿಗೆ ಮರಳಿದ್ದ ತಂದೆ ಉಮರ್ ಪಾಷ, ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಆಗಾಗ ಗಲಾಟೆ ನಡೆಸುತ್ತಿದ್ದ ಎನ್ನಲಾಗಿದೆ.
ಸೋಮವಾರ ಸಂಜೆ ಜಗಳ ತಾರಕಕ್ಕೇರಿದಾಗ, ಆವೇಶಭರಿತನಾದ ಉಮರ್ ಪಾಷ ಮಚ್ಚಿನಿಂದ ಮಗಳ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ. ಮಗಳ ಕಿರುಚಾಟ ಕೇಳಿ ರಕ್ಷಿಸಲು ಓಡಿ ಬಂದ ದೊಡ್ಡಪ್ಪ ಶೇಕುಂಞ ಅವರಿಗೂ ಆರೋಪಿ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ಮನೆಯಿಂದ ಕೇಳಿಬಂದ ಚೀರಾಟ ಕೇಳಿ ಸ್ಥಳೀಯರು ಧಾವಿಸಿದಾಗ ಜುಮೈರಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ನಡೆಸಲಾಯಿತಾದರೂ, ಮಾರ್ಗಮಧ್ಯದಲ್ಲೇ ಆಕೆ ಮೃತಪಟ್ಟಿದ್ದರು. ಗಾಯಗೊಂಡ ಶೇಕುಂಞ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ಬಂಧನ: ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಯತ್ನಿಸಿದ ಉಮರ್ ಪಾಷನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಆಸ್ತಿ ಹಂಚಿಕೆವಿಚಾರಕ್ಕೆ ನಡೆದ ಕೃತ್ಯ ಎಂದು ಕಂಡು ಬಂದಿದೆ. ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








