ಬೆಂಗಳೂರು, ಅಕ್ಟೋಬರ್ 26: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾಗಿ ಸುಮಾರು 14 ವರ್ಷಗಳ ನಂತರ ಇದೀಗ ತೀರ್ಪು ಹೊರಬಿದ್ದಿದೆ. ಆರು ಪ್ರಕರಣಗಳಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಉಳಿದ ಆರೋಪಿಗಳಿಗೆ ಒಟ್ಟು 7 ವರ್ಷ ಕಠಿಣ ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಆದೇಶ ಹೊರಡಿಸಿದೆ. ಹಾಗಾದರೆ ಯಾವ ಯಾವ ಪ್ರಕರಣದಲ್ಲಿ ಎಷ್ಟು ಶಿಕ್ಷೆ ಎಂದು ಸಂಪೂರ್ಣ ಇಲ್ಲಿದೆ.
6 ಲಕ್ಷ ಮೆಟ್ರಿಕ್ ಟನ್ ಅದಿರು ನಾಪತ್ತೆ ಕೇಸ್
2010 ರ ಮಾರ್ಚ್ 20ರಲ್ಲಿ ಸೀಜ್ ಆಗಿದ್ದ 8ಲಕ್ಷ ಮೆಟ್ರಿಕ್ ಟನ್ ಅದಿರಿನ ಪೈಕಿ, ಕೇವಲ 80 ದಿನಗಳಲ್ಲಿ 6 ಲಕ್ಷ ಮೆಟ್ರಿಕ್ ಟನ್ ನಾಪತ್ತೆಯಾಗಿತ್ತು. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ತನಿಖೆ ಆರಂಭಿಸಿತ್ತು.