ಮಂಗಳೂರು: ಸಹಾಯ ಮಾಡಲು ಬಂದು ಪ್ರಜ್ಞೆತಪ್ಪುವ ಔಷಧಿ ಬೆರೆಸಿದ ಜ್ಯೂಸ್ ಕುಡಿಸಿ ಯುವಕನೋರ್ವನು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಸಂತ್ರಸ್ತ ಯುವತಿಯೊಬ್ಬಳು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜು.21ರಂದು ಯುವತಿಯ ಕಾರು ಕದ್ರಿಯಲ್ಲಿ ಕೆಟ್ಟು ನಿಂಗಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಮೊಹಮ್ಮದ್ ಶಫಿನ್ ಕಾರನ್ನು ಸರಿಪಡಿಸಿದ್ದ. ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲ್ಬೈಲಿನ ಅಪಾರ್ಟ್ಮೆಂಟ್ನಲ್ಲಿ ಆಕೆಯ ಮನೆಗೆ ಬಿಟ್ಟು ಬಂದಿದ್ದ. ಈ ವೇಳೆ ಆಕೆಯ ಮೊಬೈಲ್ ನಂಬರ್ ಪಡೆದಿದ್ದ. ಆ.8ರಂದು ಯುವತಿ ತಮ್ಮ ಮನೆಯ ಫ್ರಿಡ್ಜ್ ಕೆಟ್ಟು ಹೋಗಿದ್ದು, ಸಹಾಯಕ್ಕಾಗಿ ಶಫಿನ್ಗೆ ಕರೆಮಾಡಿದ್ದಾಳೆ.
ಆತ ರಿಪೇರಿಯವರನ್ನು ಯುವತಿಯ ಮನೆಗೆ ಕರೆದುಕೊಂಡು ಬಂದು ರಿಪೇರಿ ಮಾಡಿಸಿದ್ದ. ಬಳಿಕ ಶಫಿನ್ ಹಣ್ಣು ಹಾಗೂ ಜ್ಯೂಸ್ ತಂದಿದ್ದ. ಈ ಜ್ಯೂಸ್ ಕುಡಿದ ಯುವತಿಗೆ ಪ್ರಜ್ಞೆ ತಪ್ಪಿದ್ದು, ಎಚ್ಚರಗೊಂಡಾಗ ಅನುಮಾನಗೊಂಡು ವಿಚಾರಿಸಿದಾಗ ಆತ ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದ. ಜತೆಗೆ ಮುಂದೆಯೂ ಸಹಕರಿಸಬೇಕು, ಇಲ್ಲದಿದ್ದರೆ ತಾನು ತೆಗೆದಿರುವ ಖಾಸಗಿ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ಆಕೆಯ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ.
ಆತನಿಂದ ಕಾರನ್ನು ಪಡೆದುಕೊಳ್ಳಲು ಅ.25ರಂದು ಆತನ ವಿಳಾಸ ಹುಡುಕಿಕೊಂಡು ದೇರಳಕಟ್ಟೆಯ ಅಪಾರ್ಟ್ಮೆಂಟ್ಗೆ ಹೋದಾಗ ಕಾರು ಪಾರ್ಕಿಂಗ್ ಸ್ಥಳದಲ್ಲಿ ಕಂಡುಬಂದಿದೆ. ವಾಚ್ಮನ್ ಬಳಿ ಮನೆಯ ವಿಳಾಸ ಪಡೆದು ಹೋಗಿ ಆತನ ತಾಯಿಯಲ್ಲಿ ಕಾರು ವಾಪಸು ನೀಡುವಂತೆ ವಿನಂತಿಸಿದಾಗ ಅಲ್ಲಿದ್ದ ಶಫಿನ್ನ ಅಣ್ಣ ಮೊಹಮ್ಮದ್ ಶಿಯಾಬ್, ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಜೊತೆಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ಆತನಿಂದ ತಪ್ಪಿಸಿಕೊಂಡು ಯುವತಿ ಮನೆಗೆ ಬಂದಿದ್ದಾಳೆ. ಅ. 27ರಂದು ರಾತ್ರಿ 9ಗಂಟೆಗೆ ಮೊಹಮ್ಮದ್ ಶಫೀನ್ ಅಕ್ರಮವಾಗಿ ಯುವತಿಯ ಮನೆಗೆ ಪ್ರವೇಶಿಸಿ, ಆಕೆಯ ಬ್ಯಾಗ್ನಲ್ಲಿದ್ದ 62ಸಾವಿರ ರೂ. ಹಣ ಕಳವು ಮಾಡಿಕೊಂಡು ಹೋಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿದ ಬಳಿಕ ಶಿಯಾಬ್ ಪತ್ನಿಯೂ ಕರೆ ಮಾಡಿ ಬೆದರಿಕೆ ಹಾಕಿದ್ದು, ಆಕೆಯ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಯುವತಿ ಇನ್ನೊಂದು ದೂರು ನೀಡಿದ್ದು, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ.