ಸಾಸ್ತಾನ: ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ 66 ಗುತ್ತಿಗೆ ಪಡೆದಿರುವ ಕೆಕೆಆರ್ ಕಂಪೆನಿ ವಿರುದ್ಧ ಚಿತ್ರಪಾಡಿ ಗ್ರಾಮದಲ್ಲಿರುವ ಮಾರಿಗುಡಿ ಬಳಿ ಅನಿರ್ಧಿಷ್ಟಿತಾವಧಿ ಮುಷ್ಕರ ನಡೆಸಲಾಗುವುದು ಎಂದು ರಾ.ಹೆ. ಹೋರಾಟ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯಿರಿ ಹೇಳಿದರು.
ಅವರು ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 9:30ಕ್ಕೆ ಪ್ರತಿಭಟನೆ ಆರಂಭಗೊಳ್ಳಲಿದ್ದು, ಮರಣ ಡೋಲು ಭಾರಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಮತ್ತು ಕೆಕೆಆರ್ ಜಾಗೃತಿಗೊಳಿಸುವುದು ನಮ್ಮ ಗುರಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ನಿರ್ವಹಣೆ ಮಾಡುವಲ್ಲಿ ಕೆಕೆಆರ್ ಕಂಪೆನಿ ಸಂಪೂರ್ಣ ವಿಫಲಗೊಂಡಿದೆ. ರಸ್ತೆ ಹೊಂಡ ಮುಚ್ಚುವುದು, ದಾರಿದೀಪ ನಿರ್ವಹಣೆ, ಪಾದಚಾರಿ ಮಾರ್ಗದಲ್ಲಿ ದೊಡ್ಡ ಹೊಂಡಗಳು ಎದ್ದು ಸಾರ್ವಜನಿಕರು ನಡೆದಾಡುವುದು ಕೂಡ ಕಷ್ಟವಾಗಿದೆ. ಟೋಲ್ ಗೇಟ್ ಲ್ಲಿ ದೊಡ್ಡ ದೊಡ್ಡ ಟ್ರಕ್ ಗಳು ಎಲ್ಲೆಂದರಲ್ಲಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ನಿರ್ವಹಿಸುವ ಕನಿಷ್ಟ ಕೆಲಸವನ್ನು ಮಾಡುತ್ತಿಲ್ಲ. ಕೇವಲ ಹಣ ಸಂಪಾದನೆ ಮಾತ್ರ ಗುರಿಯಾಗಿಸಿಕೊಂಡಿರುವ ಕೆಕೆಆರ್ ಕಂಪೆನಿ ವಿರುದ್ಧ ಹೋರಾಡುವುದು ಅಗತ್ಯವಾಗಿದೆ ಎಂದರು.
ಹೋರಾಟದಲ್ಲಿ ವಿವಿಧ ಸಂಘಟನೆಗಳು ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ದೊಡ್ಡ ಮಟ್ಟದ ಹೋರಾಟ ನಡೆಸಲಿದ್ದೇವೆ ಎಂದರು.
ಈ ಸಂದರ್ಭ ಹೋರಾಟಗಾರರಾದ ಪ್ರತಾಪ್ ಶೆಟ್ಟಿ, ಐರೋಡಿ ವಿಠಲ್ ಪೂಜಾರಿ, ಅಚ್ಯುತ್ ಪೂಜಾರಿ, ಪ್ರಶಾಂತ್ ಶೆಟ್ಟಿ ರಾಜೇಂದ್ರ ಸುವರ್ಣ ಇದ್ದರು.