ಕೆಎಫ್ಡಿ ಕಾಯಿಲೆಗೆ ಮುಂದಿನ ವರ್ಷ ಲಸಿಕೆ ಬರುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದರು.
ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿ, ಈ ಹಿಂದೆ ಎನ್ಐವಿ ಪೂನಾ ಕೇಂದ್ರದವರು 1990ರಲ್ಲಿ ತಯಾರಿಸಿದ ಲಸಿಕೆಯು ಕ್ಷಮತೆಯನ್ನು ಕಳೆದುಕೊಂಡಿದ್ದು, ಅದರಿಂದ ಕಾಯಿಲೆಗೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆ ಹೈದರಬಾದ್ನ ಐಸಿಎಂಆರ್ನಲ್ಲಿ ಲಸಿಕೆ ತಯಾರಿಸಲು ಸೂಚಿಸಿದ್ದೇವೆ. ಈಗಾಗಲೇ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ. ಇದು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುವ ಹಿನ್ನೆಲೆ ಕೇಂದ್ರ ಸರಕಾರ ಈ ಬಗ್ಗೆ ಹೆಚ್ಚಿನ ಮುತುವರ್ಜಿ ತೆಗೆದುಕೊಂಡಿಲ್ಲ. ಅದಕ್ಕಾಗಿ ನಾವು ಕಾರ್ಪೋರೆಟ್ ಫಂಡ್ ಕೂಡ ರೈಸ್ ಮಾಡಿ ವ್ಯವಸ್ಥೆ ಮಾಡಿದ್ದೇವೆ. ಮುಂದಿನ ವರ್ಷದೊಳಗೆ ಲಸಿಕೆ ತಯಾರಾಗುವ ಸಾಧ್ಯತೆ ಇದೆ ಎಂದರು.
ಕೆಎಫಡಿ ಕಾಯಿಲೆಗೆ ಬೇಕಾದ ಪೂರ್ಣ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕಾಯಿಲೆಯ ಚಿಕಿತ್ಸೆಗೆ ಬೇಕಾದ ಸಂಚಾರಿ ವಾಹನಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.