ಕೋಟ: ಇಲ್ಲಿನ ಕೋಟ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಮಿತ್ರರು ತಂಡದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಪ್ರೇಮಾ ಗಣೇಶ್ ಅವರು ಕೇವಲ ಒಂದು ಮತದಿಂದ ಸೋಲನ್ನಪ್ಪಿದ್ದರು.ಚುನಾವಣೆಯಲ್ಲಿ ಕನಿಷ್ಠ ಮತಗಳ ಅಂತರದಿಂದ ಸೋತಾಗ ಮರುಎಣಿಕೆ ಕೋರುವುದು ಕಾನೂನಾತ್ಮಕ ಹಕ್ಕಾಗಿದ್ದು, ನ್ಯಾಯಾಲಯ ಕೂಡ ಈ ಹಕ್ಕನ್ನು ಎತ್ತಿ ಹಿಡಿದಿದೆ ಎಂದು ಸಹಕಾರಿ ಮಿತ್ರರು ತಂಡದ ಮುಖಂಡ, ಕೋಟ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಹೇಳಿದರು.

ಅವರು ಜೂ.೨೮ರಂದು ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಮಾ ಗಾಣಿಗ ಹಾಗೂ ಪ್ರೇಮಾ ಗಣೇಶ್ ನಡುವಿನ ಸ್ಪರ್ಧೆಯಲ್ಲಿ ಒಂದು ಮತದ ಅಂತರದಲ್ಲಿ ಪ್ರೇಮಾ ಗಣೇಶ್ ಸೋತಿದ್ದಾರೆ. ಮರು ಎಣಿಕೆ ಸಂದರ್ಭ ಒಂದು ಮತ ಇವರ ಪರ ಬಂದಿದ್ದೇ ಆದಲ್ಲಿ ಪ್ರೇಮಾ ಗಣೇಶ್ ಗೆಲುವು ಕಾಣಬಹುದು ಎನ್ನುವುದು ನಮ್ಮ ಆಶಾಭಾವನೆ. ಅಲ್ಲದೆ ಈ ಚುನಾವಣೆಯಲ್ಲಿ 620ಮತಗಳು ಅಸಿಂಧುವಾಗಿದ್ದವು. ಸಹಜವಾಗಿ ಅಸಿಂಧು ಮತಗಳನ್ನು ಕುಲಂಕುಶವಾಗಿ ಪರಿಶೀಲಿಸಿದರೆ ಕೆಲವು ನಮ್ಮ ಪರವಾಗಿ ಇರಬಹುದು ಎನ್ನುವ ಆಸೆ ಎರಡೂ ಕಡೆಯವರಿಗೆ ಇದೆ. ಒಂದು ಇರುತ್ತದೆ. ಅದರಂತೆ ಮರು ಎಣಿಕೆಗೆ ಅವಕಾಶ ಕೋರಲಾಗಿದೆ ಎಂದರು.

ಜೂ.29ರಂದು ನಡೆಯುವ ಮರು ಎಣಿಕೆಯಲ್ಲಿ ಯಾವುದೇ ರೀತಿಯ ಫಲಿತಾಂಶ ಬಂದರೂ ಅದನ್ನು ಸ್ವೀಕರಿಸಲು ಸಿದ್ಧವಾಗಿದ್ದೇನೆ ಎಂದು ಪರಾಜಿತ ಅಭ್ಯರ್ಥಿ ಪ್ರೇಮಾ ಗಣೇಶ್ ತಿಳಿಸಿದರು.
ಎ.ಆರ್. ಕಚೇರಿ ಎದುರು ಪ್ರತಿಭಟನೆ ಮಾಡುವ ಮೂಲಕ ಬಿಜೆಪಿಯವರು ಸಹಕಾರಿ ವ್ಯವಸ್ಥೆಯನ್ನು ಸಂಪೂರ್ಣ ರಾಜಕೀಯಗೊಳಿಸಿ ಸಣ್ಣತನ ಮೆರೆದಿದ್ದಾರೆ. ಉಚ್ಛ ನ್ಯಾಯಾಲಯ ಮರುಎಣಿಕೆ ಆದೇಶವನ್ನು ಪುರಸ್ಕರಿಸಿದ ಮೇಲೂ ಪ್ರತಿಭಟನೆ ಮಾಡಿರುವುದು ಕಾನೂನಿಗೆ ತೋರಿದ ಅಗೌರವವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್ ತಿಳಿಸಿದರು. ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ನಾಗರಾಜ ಹಂದೆ, ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ ಹಾಗೂ ನಿರ್ದೇಶಕರು, ಸಹಕಾರಿ ಮಿತ್ರರು ತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿದ್ದರು.